ಎರಂಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ (ಜನನ: ಮೇ ೨೨, ೧೯೪೦) ವಿಶ್ವದ ಶ್ರೇಷ್ಠ ಆಫ್ ಸ್ಪಿನ್ ಬೌಲರ್‍ಗಳಲ್ಲಿ ಒಬ್ಬರು. == ಜನನ ಮತ್ತು ವಿದ್ಯಾಭ್ಯಾಸ == ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಬೌಲರುಗಳಲ್ಲಿ ಒಬ್ಬರೆನಿಸಿರುವ ನಮ್ಮ ಎರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅವರು ಮೇ ೨೨, ೧೯೪೦ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನ ಎನ್ ಐ ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದರು. == ಓದಿಗಾಗಿ ಕ್ರಿಕೆಟ್ ಮುಂದೂಡಿಕೆ == ಪ್ರಸನ್ನರು ೧೯೬೧ರ ವರ್ಷದಲ್ಲಿ ವೆಸ್ಟ್ ಇಂಡೀಜ್ ವಿರುದ್ಧ ಕ್ರಿಕೆಟ್ ಟೆಸ್ಟ್ ಪಂದ್ಯವೊಂದನ್ನು ಆಡಿ ನಂತರದಲ್ಲಿ "ನಾನು ಇಂಜಿನಿಯರಿಂಗ್ ಮುಗಿಸುವವರೆಗೆ ಕ್ರಿಕೆಟ್ ಆಡೋಲ್ಲ" ಎಂದು ನಿರ್ಧರಿಸಿ ಇಂಜಿನಿಯರಿಂಗ್ ಮುಗಿಸಿ ಪುನಃ ೧೯೬೭ರ ವರ್ಷದಲ್ಲಿ ಕ್ರಿಕೆಟ್ಟಿಗೆ ಪ್ರವೇಶಿಸಿದರು. == ದೇಶಕ್ಕೆ ಗಣ್ಯತೆ ತಂದವರು == ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಜ್ ಮುಂತಾದ ಅಂದಿನ ಸಶಕ್ತ ತಂಡಗಳ ವಿರುಧ್ಧ ಪ್ರಸನ್ನರು ನೀಡಿದ ಅದ್ಭುತ ಬೌಲಿಂಗ್ ಪ್ರದರ್ಶನಗಳು ಆ ಕಾಲದಲ್ಲಿ ದುರ್ಬಲ ತಂಡಗಳ ಸಾಲಿನಲ್ಲಿದ್ದ ಭಾರತ ತಂಡಕ್ಕೆ ಗಣ್ಯತೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿತು. ನ್ಯೂಜಿಲೆಂಡ್ ಅಂತಹ ವಿದೇಶೀ ಆಟಗಾರರಿಗೆ ಕಷ್ಟಕರವಾದ ಮೈದಾನಗಳಲ್ಲಿ ಅವರು ಮೂರು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟುyijh9jgihu9iijhhdtokbcxs6ol ವಿಕೆಟ್ ಪಡೆದ ಸಾಧನೆ ಪಡೆದಿರುವುದು ಕ್ರಿಕೆಟ್ ಚರಿತ್ರೆಗಳಲ್ಲಿ ಪ್ರಮುಖ ದಾಖಲಾತಿ ಪಡೆದಿದೆ. ತಾವು ಆಡಿದ ಮೊದಲ ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ಪ್ರಸನ್ನರ ಭಾರತೀಯ ದಾಖಲೆ ಇದುವರೆಗೂ ಭೇದಿತವಾಗಿಲ್ಲದಿರುವುದು ಕೂಡಾ ಪ್ರಸನ್ನರ ಗರಿಮೆಯನ್ನು ಸಾರುತ್ತದೆ. == ಶ್ರೇಷ್ಠ ಬೌಲರ್ == ಅಂದಿನ ಕಾಲದ ಪ್ರತಿಷ್ಟಿತ ಬ್ಯಾಟುದಾರರಾದ ಇಯಾನ್ ಚಾಪೆಲ್, ಬಿಲ್ ಓ ರ್ಯಾಲಿ (ನಾವು ಆತನನ್ನು ಲಾರಿ ಅಂತ ಕರೆಯುತ್ತಿದ್ದೆವು), ಕ್ಲೈವ್ ಲಾಯ್ಡ್, ಅಲ್ವಿನ್ ಕಾಳೀಚರಣ್ ಅಂತಹವರಿಂದ ತಾವು ಆಡಿದ ಶ್ರೇಷ್ಠ ಬೌಲರ್ ಎಂದು ಬಣ್ಣಿಸಿಕೊಂಡವರು ಇ ಎ ಎಸ್ ಪ್ರಸನ್ನ. ಗಾಳಿಯಲ್ಲಿ ಅವರು ಸ್ಪಿನ್ ಮಾಡುತ್ತಿದ್ದ ವೈಖರಿ, ಮೂಡಿಸುತ್ತಿದ್ದ ಅಮೋಘ ಫ್ಲೈಟ್, ಬ್ಯಾಟುದಾರನ ಜಾಣ್ಮೆಯನ್ನು ಮೀರಿಸುತ್ತಿದ್ದ ಶಾರ್ಟ್ ಪಿಚ್ ಡೆಲಿವರಿಗಳು ಇವೆಲ್ಲವುಗಳ ಜೊತೆಗೆ ಬೌಲಿಂಗಿನಲ್ಲಿ ಅತ್ಯದ್ಭುತ ಜಾಣ್ಮೆ, ನಿಯಂತ್ರಣ ಮತ್ತು ಕುಶಲತೆಗಳಿಗಾಗಿ ಅವರು ಪ್ರಖ್ಯಾತಿ ಪಡೆದಿದ್ದರು. ಪ್ರಸನ್ನರು ಆಡಿದ್ದು ಕೇವಲ ೪೯ ಟೆಸ್ಟ್ ಪಂದ್ಯಗಳು ಮಾತ್ರ. ಅವರು ಗಳಿಸಿದ್ದು ೧೮೯ ವಿಕೆಟ್. ಬ್ಯಾಟಿಂಗ್ ನಲ್ಲಿ ಕೂಡಾ ಅವರು ಉಪಯುಕ್ತರಾಗಿದ್ದರು. ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿದ್ದಾಗ ಕೊನೆಯದಿನ ಪೂರ್ತಿ ಸರ್ದೇಸಾಯ್ ಅವರೊಂದಿಗೆ ಆಡಿ, ಪಂದ್ಯಕ್ಕೆ ಡ್ರಾ ಒದಗುವಂತೆ ಅವರು ಆಡಿದ್ದು ದಾಖಲೆಯಾಗಿದೆ. ಅವರು ಆಡಿದ ೨೩೫ ಪ್ರಥಮ ದರ್ಜೆ ಪಂದ್ಯಗಳಲ್ಲಿ ೨೪೭೬ರನ್ನುಗಳನ್ನೂ, ೯೫೭ವಿಕೆಟ್ಟುಗಳನ್ನೂ ಸಂಪಾದಿಸಿದ್ದರು. == ಕರ್ನಾಟಕಕ್ಕೆ ದೊರಕಿಸಿಕೊಟ್ಟ ಹಿರಿಮೆ == ಹದಿನೇಳು ವರ್ಷ ರಣಜೀ ಪ್ರಶಸ್ತಿ ಸ್ವಾಮ್ಯ ಪಡೆದಿದ್ದ ಮುಂಬಯಿನಿಂದ ಪ್ರಥಮ ಬಾರಿ ಕರ್ನಾಟಕಕ್ಕೆ ರಣಜೀ ಪ್ರಶಸ್ತಿ ತಂದವರು ಪ್ರಸನ್ನ. ಅದೂ ಗಾವಸ್ಕರ್ ನಾಯಕತ್ವದಲ್ಲಿ ಶ್ರೇಷ್ಠ ತಂಡವಿದ್ದ ಮುಂಬಯಿ ಅನ್ನು ಸೆಮಿ ಫೈನಲ್ ಪಂದ್ಯದಲ್ಲಿ ಸೋಲಿಸಿ. ಅವರ ನಾಯಕತ್ವದಲ್ಲಿ ಕರ್ನಾಟಕವು ಎರಡು ಬಾರಿ ರಣಜೀ ಟ್ರೋಫಿ ಪ್ರಶಸ್ತಿ ಪಡೆಯಿತು. ಭಾರತ ತಂಡದ ನಾಯಕರಾಗುವುದಕ್ಕೆ ಸಹಾ ಅವರು ತುಂಬಾ ಸಮೀಪದಲ್ಲಿದ್ದರು. ಒಮ್ಮೆ ಕರ್ನಾಟಕ ತಂಡದಲ್ಲಿ ಆರು ಜನ ಟೆಸ್ಟ್ ಆಟಗಾರನ್ನು ಪ್ರತಿನಿಧಿಸುವಂತೆ ಮಾಡಿದ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ. ಪ್ರಸನ್ನ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಎಸ್.ಎಂ. ಎಚ್. ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಒಟ್ಟಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಈ ಪಟ್ಟಿಯ ಹೊರತಾಗಿ ಕೂಡಾ ಅಂದಿನ ತಂಡದಲ್ಲಿದ್ದ ವಿಜಯಕುಮಾರ್, ವಿಜಯಕೃಷ್ಣ, ಜಯಪ್ರಕಾಶ್, ಲಕ್ಷ್ಮಣ್ ಅಂತಹ ಅಂದಿನ ಬಹುತೇಕ ಆಟಗಾರರು ಕೇವಲ ರಣಜೀ ವಲಯದಲ್ಲಿ ಮಾತ್ರ ಆಡಿದ್ದರೂ ಮಹಾನ್ ಪ್ರತಿಭಾವಂತರಾದ ಆಟಗಾರರಾಗಿ ರೂಪುಗೊಂಡಿದ್ದರು. ಇವರೆಲ್ಲರ ರೂವಾರಿ ಕರ್ಣಾಟಕ ತಂಡದ ನಾಯಕರಾದ ಪ್ರಸನ್ನ ಆಗಿದ್ದರು. == ನಿವೃತ್ತಿಯನಂತರದಲ್ಲಿಯೂ ಶ್ರೇಷ್ಠತೆ == ೧೯೮೫ರ ಅವಧಿಯಲ್ಲಿ ಭಾರತ ತಂಡ ಸುನೀಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಆ ತಂಡದ ಮ್ಯಾನೇಜರ್ ಆಗಿದ್ದವರು ಇ.ಎ.ಎಸ್. ಪ್ರಸನ್ನ. ಆ ಸಂದರ್ಭದಲ್ಲಿ ತಂಡದ ನಾಯಕ ಗಾವಸ್ಕರ್ "ನಮ್ಮ ಮ್ಯಾನೇಜರ್ ಪ್ರಸನ್ನ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುವ ವೈಖರಿಯನ್ನು ನೋಡಿದಾಗಲೆಲ್ಲಾ ಅವರನ್ನು ನನ್ನ ಹನ್ನೊಂದು ಜನರ ತಂಡದಲ್ಲಿ ಸೇರಿಸಿಕೊಂಡು ಬಿಡಬಾರದೇಕೆ ಎಂದು ಪ್ರಚೋದನೆಗೊಂಡು ಬಿಡುತ್ತಿದ್ದೆ. ಬಹುಶಃ ಕ್ಷೇತ್ರ ರಕ್ಷಣೆ ಎಂಬ ಅಂಶ ಅಡ್ಡಬರದಿದ್ದರೆ, ನಾನು ಹಾಗೆ ಮಾಡಿಯೇ ಬಿಡುತ್ತಿದ್ದೆ ಎನಿಸುತ್ತದೆ" ಎಂದು ನುಡಿದಿದ್ದರು. ನಿವೃತ್ತಿಯ ನಂತರದಲ್ಲಿ ಕೂಡಾ ಪ್ರಸನ್ನರ ಬೌಲಿಂಗ್ ಜಾಣ್ಮೆ ಹೇಗಿತ್ತು ಎಂಬುದಕ್ಕೆ ಇದೊಂದು ಗೌರವಪೂರ್ಣ ನಿದರ್ಶನದಂತಿವೆ. ಪ್ರಸನ್ನ ರು ಭಾರತದ ಆಟಗಾರರಿಗೆ ಮಾತ್ರವಲ್ಲದೆ ವಿದೇಶಿ ಆಟಗಾರರನ್ನು ತಯಾರು ಮಾಡಲು ಸಹಾ ಸಾಕಷ್ಟು ಬೇಡಿಕೆ ಪಡೆದಿದ್ದರು. == ಮಹಾನ್ ತಂತ್ರಜ್ಞರಾಗಿ == ಇ ಎ ಎಸ್ ಪ್ರಸನ್ನ ಅವರು ಕ್ರಿಕೆಟ್ಟಿನಲ್ಲಿ ಅಷ್ಟೇ ಅಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದರು. ಅಂದಿನ ರೆಮ್ಕೋ, ಬಿ. ಎಚ್. ಇ. ಎಲ್, ಕುದುರೆ ಮುಖ ಕಬ್ಬಿಣ ಅದಿರು ಕಾರ್ಖಾನೆ, ಎನ್.ಜಿ. ಇ. ಎಫ್ ಮುಂತಾದ ಸಂಸ್ಥೆಗಳಲ್ಲಿನ ಪ್ರಮುಖ ತಾಂತ್ರಿಕ ಅಧಿಕಾರಿಗಳಾಗಿ ಸಹಾ ಅವರು ಹೆಸರಾಗಿದ್ದರು. == ಟೆಸ್ಟ್ ಪಂದ್ಯಗಳಲ್ಲಿನ ಅಂಕಿ ಸಂಖ್ಯೆಗಳು == == ಪ್ರಶಸ್ತಿಗಳು == ೧೯೭೦ - ಪದ್ಮಶ್ರೀ ೨೦೦೬ - ಕ್ಯಾಸ್ಟ್ರೋಲ್ ಜೀವಮಾನದ ಸಾಧನೆ ಪ್ರಶಸ್ತಿ ಬೆಂಗಳೂರಿನ ದೊಮ್ಮಲೂರಿನ ಇ.ಎಸ್.ಐ. ಆಸ್ಪತ್ರೆಯ ೩ ಅಡ್ಡರಸ್ತೆಗೆ ಪ್ರಸನ್ನರ ಹೆಸರು ಇಡಲಾಗಿದೆ. == ಬಾಹ್ಯ ಸಂಪರ್ಕಗಳು == ಕ್ರಿಕ್ ಇನ್ಫೋ ತಾಣದಲ್ಲಿ ಪ್ರಸನ್ನ ಬಗ್ಗೆ ಮಾಹಿತಿ